




ಯಕ್ಷಗಾನ ಕಲಾರಂಗದ 93ನೆಯ ಮನೆ ಹಸ್ತಾಂತರ
ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಜನಿ(sslcಯಲ್ಲಿ 98%, 1puc 97%),(ಶ್ರೀಮತಿ ಸರಸ್ವತಿ ಮತ್ತು ಶ್ರೀ ಬಸವ ಪೂಜಾರಿ ಇವರ ಪುತ್ರಿ) ಇವಳಿಗೆ ಬ್ರಹ್ಮಾವರದ ತಾಲೂಕಿನ ವಡ್ಡರ್ಸೆಯಲ್ಲಿ ಶ್ರೀ ದಯಾಶಂಕರ ಶೆಟ್ಟಿ ಮತ್ತು ಶ್ರೀಮತಿ ಪ್ರತಿಭಾ ಶೆಟ್ಟಿ ಇವರ ಗೌರವಾರ್ಥ ಮುಂಬೈಯ ವಿಂಡ್ಸರ್ ರೆಫ್ರೆಕ್ಟರೀಸ್ ಪ್ರೈ.ಲಿ. ಸಂಸ್ಥೆಯ ಸಿಇಒ ಶ್ರೀಮತಿ ಪ್ರಜ್ಞಾ ಶೆಟ್ಟಿ ಇವರು ಸಂಸ್ಥೆಯ ವತಿಯಿಂದ ನಿರ್ಮಿಸಿದ ನೂತನ ಮನೆ ‘ಪ್ರತಿಭಾ ನಿಲಯ’ವನ್ನು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು 02.05.2026 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿಗಳ ಆಯ್ಕೆ, ಮನೆ ನಿರ್ಮಾಣಕ್ಕೆ ಅರ್ಹತೆಯ ಮಾನದಂಡ ಎಲ್ಲವೂ ಪಾರದರ್ಶಕ. ಅಲ್ಲಿ ಯಾರ ಪ್ರಭಾವವೂ ಕೆಲಸ ಮಾಡದು, ಅವರ ಶಿಸ್ತು, ಸಮಯಪ್ರಜ್ಞೆಯಿಂದ ಕೂಡಿದ ಕಾರ್ಯಕ್ರಮ ಹೇಗಿದೆಯೆಂದರೆ ಬರಲು ಅನಿವಾರ್ಯ ಕಾರಣದಿಂದ ಸ್ವಲ್ಪ ವಿಳಂಬವಾದರೂ ನಮ್ಮನ್ನು ಅಪರಾಧಿ ಪ್ರಜ್ಞೆಗೆ ಒಳಗಾಗುವಂತೆ ಮಾಡುತ್ತದೆ ಎಂದು ಹೇಳಿದರು. ನಿವೃತ್ತ ಪ್ರಾಧ್ಯಾಪಕ ಉಪೇಂದ್ರ ಸೋಮಯಾಜಿಯವರು ಯಕ್ಷಗಾನ ಕಲಾರಂಗ ಸುಮನಸರ ಕೂಟ. ಅವರ ಸಮಾಜಪರ ಕಾಳಜಿ ಅನನ್ಯ. ಈ ಕಾಲದಲ್ಲಿ ಇಂತಹ ಒಂದು ಸಂಘಟನೆ ಇದೆ ಎಂಬುದೇ ನಾಡಿನ ಹೆಮ್ಮೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಮಾಜಿ ಲಯನ್ಸ್ ಗವರ್ನರ್ ವಿ. ಜಿ. ಶೆಟ್ಟಿ ಯಕ್ಷಗಾನ ಕಲಾರಂಗದ ಸದಸ್ಯನಾಗಿ ನಮ್ಮ ಸಂಸ್ಥೆಯ ಕೆಲಸವನ್ನು ಅಭಿಮಾನದಿಂದ ಹೇಳಿಕೊಳ್ಳುತ್ತೇನೆ. ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆ ಕುರಿತು ಕೇಳಿ ತಿಳಿದು ತಮ್ಮ ಸಂಸ್ಥೆಯ ಸಿ.ಎಸ್. ಆರ್.ಮೂಲಕ ಮನೆಯ ಪ್ರಾಯೋಜಕತ್ವ ವಹಿಸಿದ ಪ್ರಜ್ಞಾ ಶೆಟ್ಟಿಯವರಿಗೆ ಕೃತಜ್ಞತೆ ಹೇಳಿದರು. ಕುಂದಾಪುರ ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಚನ್ನರಾಯಪಟ್ಟಣದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಅರುಣಾ ಸೋಮನಾಥ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಜಗದೀಶ ನಾವುಡ, ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಜಗದೀಶ ಶೆಟ್ಟಿ, ಭರತ್ ಶೆಟ್ಟಿ, ಸಂಸ್ಥೆಯ ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ, ಯು.ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಷ್ಣುಮೂರ್ತಿ ಭಟ್ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಪ್ರೊ. ಕೆ. ಸದಾಶಿವ ರಾವ್, ವಿದ್ಯಾಪ್ರಸಾದ್, ಸದಸ್ಯರುಗಳಾದ ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯ, ಹಿರಿಯಣ್ಣ ಕಿದಿಯೂರ್, ಜಯರಾಮ ಪಡಿಯಾರ್, ಎಚ್. ಎನ್. ವೆಂಕಟೇಶ್, ಗಣೇಶ ಬ್ರಹ್ಮಾವರ, ಸನಕ ಕಡೆಕಾರ್, ವಿವೇಕ ಪ್ರೌಢ ಶಾಲೆಯ ಮಹಾಲಕ್ಷ್ಮಿ ಮೇಡಮ್, ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.