





ಯಕ್ಷಗಾನ ಕಲಾರಂಗದಲ್ಲಿ ಪ್ರಥಮ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿಗಳ ಸನಿವಾಸ ಶಿಬಿರ ನಡೆಯುತ್ತಿದ್ದು, ಕೊನೆಯ ದಿನವಾದ 03.03.2025 ರಂದು ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ನಿಟ್ಟೂರಿನ ಆಭರಣ ಮೋಟಾರ್ಸ್ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಈ ಮಹಾ ಅಭಿಯಾನಕ್ಕೆ ಉಡುಪಿಯ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿಯವರು ಚಾಲನೆ ನೀಡಿದರು. ಪರಿಸರ ಇಂಜಿನಿಯರ್ ಶ್ರೀಮತಿ ಸ್ನೇಹಾ, ಆರೋಗ್ಯ ನಿರೀಕ್ಷಕರಾದ ಹರೀಶ್ ಬಿಲ್ಲವ ಮತ್ತು ಪ್ರಕಾಶ್ ಪ್ರಭು ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ,ಗಾಂಧಿ ಆಸ್ಪತ್ರೆಯ ವರಿಷ್ಠರಾದ ಡಾ. ಹರಿಶ್ಚಂದ್ರ, ಸಂಸ್ಥೆಯ ದಾನಿಗಳೂ ಮತ್ತು ಪರಿಸರ ಪ್ರೇಮಿಗಳೂ ಆದ ಬೆಂಗಳೂರಿನ ವೆಂಕಟೇಶ ದಂಪತಿಗಳು ಹಾಗೂ ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು. 230 ಶಿಬಿರಾರ್ಥಿಗಳು ಸೇರಿದಂತೆ ಸುಮಾರು 250 ಜನರು ಭಾಗವಹಿಸಿದ್ದರು. ನಿಟ್ಟೂರಿನಿಂದ ಮೂರು ಕಿಲೋ ಮೀಟರ್ ದೂರದ ಉದ್ಯಾವರದ ಬಲಾಯ್ಪಾದೆ ವರೆಗೆ ರಸ್ತೆಯ ಇಕ್ಕೆಲಗಳಲ್ಲಿರುವ ತ್ಯಾಜ್ಯ ವಸ್ತುವನ್ನು ವಿಲೇವಾರಿ ಮಾಡಲಾಯಿತು. ನಗರಸಭೆಯ ಸ್ವಚ್ಛತಾ ಕರ್ಮಚಾರಿಗಳು ಇದರಲ್ಲಿ ಸಹಕರಿಸಿದರು. ನಗರಸಭೆ ವತಿಯಿಂದ ಕೈ ಗವಸು ಮತ್ತು ಮಾಸ್ಕ್ ಗಳನ್ನು ನೀಡಲಾಯಿತು. ಪಂಚಮಿ ಟ್ರಸ್ಟ್ ಭಾಗವಹಿಸಿದವರಿಗೆ ನೀಡಿದ ಸಮವಸ್ತ್ರದ ಪ್ರಾಯೋಜಕತ್ವ ವಹಿಸಿತ್ತು. ಸಮಾಜಕ್ಕೆ ಪರಿಸರ ಸ್ವಚ್ಛತೆಯ ಜಾಗೃತಿ ಮತ್ತು ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಲೇವಾರಿಯ ಕುರಿತ ಸ್ಪಷ್ಟ ತಿಳುವಳಿಕೆಯೊಂದಿಗೆ ಪ್ರತ್ಯಕ್ಷ ಪ್ರಾಯೋಗಿಕ ಅನುಭವ ಈ ಮಹಾಭಿಯಾನದ ಉದ್ದೇಶವಾಗಿತ್ತು.200 ಚೀಲಕ್ಕೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.