


ಮಣೂರು ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಜರಗಿದ ಯಕ್ಷಶಿಕ್ಷಣ ಟ್ರಸ್ಟ್ ನ ಮಣೂರು ಪರಿಸರದ ಆರು ಶಾಲೆಗಳ ಪ್ರದರ್ಶನ 01.01.2024ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಯಕ್ಷಶಿಕ್ಷಣ ಟ್ರಸ್ಟ್ ಸಮರ್ಪಣಾ ಭಾವದಿಂದ ಈ ಕೆಲಸವನ್ನು ಮಾಡುತ್ತಿದೆ. ಯಕ್ಷಗಾನ ಕಲಾರಂಗದ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು. ಆನಂದ ಸಿ. ಕುಂದರ್ ಮಾತನಾಡಿ ಕನ್ನಡ ಉಳಿಸುವಲ್ಲಿ ಯಕ್ಷಶಿಕ್ಷಣದ ಪಾತ್ರ ಮಹತ್ತ್ವದ್ದು, ಮುಂದಿನ ಬಾರಿಯೂ ಮಣೂರಿನಲ್ಲಿ ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಅವಕಾಶ ಸಿಗಬೇಕೆಂದು ವಿನಂತಿಸಿಕೊಂಡರು. ಸಮಾರೋಪ ಸಮಾರಂಭದಲ್ಲಿ ನಿರಂಜನ್ ನಾಯ್ಕ್, ಎಂ. ಗಂಗಾಧರ ರಾವ್, ರಾಜಗೋಪಾಲ ಆಚಾರ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು. ಆಗಮಿಸಿದ ಶಾಲೆಗಳ ಮುಖ್ಯಸ್ಥರಿಗೆ, ವಿದ್ಯಾರ್ಥಿಗಳಿಗೆ ನೀಡುವ ಪ್ರಮಾಣಪತ್ರವನ್ನು ನೀಡಲಾಯಿತು. ಯಕ್ಷಗಾನದಲ್ಲಿ ಪಾತ್ರ ನಿರ್ವಹಿಸಿದ ಮೂವರು ವಿದ್ಯಾರ್ಥಿಗಳು ತಮ್ಮ ಯಕ್ಷಶಿಕ್ಷಣದ ಅನುಭವಗಳನ್ನು ಹಂಚಿಕೊಂಡರು. ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಎಚ್. ಎನ್. ಶೃಂಗೇಶ್ವರ ವಂದಿಸಿದರು. ಗಣೇಶ್ ಬ್ರಹ್ಮಾವರ ಮತ್ತು ನಾಗರಾಜ ಹೆಗಡೆ ಸಹಕರಿಸಿದರು. ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಪೂರ್ವದಲ್ಲಿ ಸರಕಾರಿ ಪ್ರೌಢಶಾಲೆ, ಬೀಜಾಡಿಯ ವಿದ್ಯಾರ್ಥಿಗಳಿಂದ, ನವೀನ್ ಕುಮಾರ್ ಕೋಟ ಇವರ ನಿರ್ದೇಶನದಲ್ಲಿ ಕೃಷ್ಣ ಕೃಷ್ಣ ಶ್ರೀಕೃಷ್ಣ ಯಕ್ಷಗಾನ, ಸಭೆಯ ಬಳಿಕ ಕೆ.ಪಿ.ಎಸ್. ಕೋಟೇಶ್ವರ ಇಲ್ಲಿನ ವಿದ್ಯಾರ್ಥಿಗಳಿಂದ, ಸ್ಕಂದ ಇವರ ನಿರ್ದೇಶನದಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು. ಜನವರಿ 3ರ ರಿಂದ 5ರ ತನಕ ಕುಂದಾಪುರದಲ್ಲಿ ಆರು ಪ್ರದರ್ಶನಗಳೊಂದಿಗೆ ಈ ಅಭಿಯಾನ ಸಮಾಪ್ತಿಯಾಗಲಿದೆ.