Yakshagana Kalaranga

ಯಕ್ಷಗಾನ ಕಲಾರಂಗದ 79ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಜ್ವಲ್ (ಶ್ರೀಮತಿ ಜ್ಯೋತಿ ಮತ್ತು ಶ್ರೀ ಭಾಸ್ಕರ ಪೂಜಾರಿ ಇವರ ಪುತ್ರ) ಇವನಿಗೆ ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಡಾ. ಮಹಾಬಲೇಶ್ವರ ರಾವ್ ಅವರು ತಮ್ಮ ಮಾತಾ – ಪಿತರಾದ ಮಣೂರು ವಿಶ್ವನಾಥ ಮಯ್ಯ ಮತ್ತು ಸರಸ್ವತಿ ಇವರ ಸ್ಮರಣೆಯಲ್ಲಿ, 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ವಿಶ್ವಸರಸ್ವತಿ’ಯನ್ನು 17.08.2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತನ್ನ ಬಾಲ್ಯದ ಕಷ್ಟದ ದಿನಗಳು ಮತ್ತು ತಂದೆ ತಾಯಿಗಳನ್ನು ನೆನಪು ಮಾಡಿಕೊಂಡರು. ಸಾಧಿಸುವ ಛಲವಿದ್ದರೆ ಆರ್ಥಿಕ ಅನನುಕೂಲತೆ ಅಡ್ಡಿಯಾಗದೆಂದು ಯಕ್ಷಗಾನ ಕಲಾರಂಗದಂತಹ ಸಂಸ್ಥೆ ನಿನ್ನೊಂದಿಗಿರುವಾಗ ಅಂಜಬೇಕಾಗಿಲ್ಲವೆಂದು ಪ್ರಜ್ವಲನಿಗೆ ಧೈರ್ಯದ ಮಾತುಗಳನ್ನು ಹೇಳಿದರು. ಹಿರಿಯರಾದ ಬೈಕಾಡಿ ಶ್ರೀನಿವಾಸ ರಾಯರು ತನ್ನ ಸೋದರಳಿಯ ಮಹಾಬಲೇಶ್ವರ ರಾವ್ ಅವರ ಸಾಧನೆಯನ್ನು ಅಭಿನಂದಿಸಿ ಶುಭಕೋರಿದರು. ಅಭ್ಯಾಗತರುಗಳಾದ ಡಾ. ಎ. ವಿ. ಬಾಳಿಗಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಪಿ. ವಿ. ಭಂಡಾರಿ ಹಾಗೂ ಮನೋ ವೈದ್ಯ ವಿರೂಪಾಕ್ಷ ದೇವರಮನೆ ಕಲಾರಂಗದ ಸಾಮಾಜಿಕ ಕಾರ್ಯಕ್ರಮ ಎಲ್ಲ ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಮತಿ ಮಹಾಶ್ವೇತಾ 79 ನೇ ಸ್ವಾತಂತ್ರ್ಯ ವರ್ಷವೇ ಸಂಸ್ಥೆಯ 79ನೇ ಮನೆಯ ಪ್ರಾಯೋಜಕತ್ವದ ಅವಕಾಶ ನಮ್ಮ ತಂದೆತಾಯಿಯರಿಗೆ ಸಿಕ್ಕಿರುವುದು ಯೋಗಾಯೋಗ ಎಂದು ಹೇಳಿದರು. ವೇದಿಕೆಯಲ್ಲಿ ಡಾ. ಮಹಾಬಲೇಶ್ವರ ರಾಯರ ಪತ್ನಿ ಶ್ರೀಮತಿ ಸುಕನ್ಯಾ ಕಳಸ, ತಂಗಿ ಶ್ರೀಮತಿ ಗೌರಿ ಶಿವರಾಮ ಹೆಬ್ಬಾರ್,ವಾಸುದೇವ ಕಾರಂತ,ಡಾ.ಜಗನ್ನಾಥ ಕೆ., ಶ್ರೀಮತಿ ನಿರ್ಮಲಾ,ಡಾ.ವತ್ಸಲಾ,ಬೀಜಾಡಿಯ ಸಾಮಾಜಿಕ ಕಾರ್ಯಕರ್ತರಾದ ಶೇಖರ ಚಾತ್ರಬೆಟ್ಟು, ಬಾಬಣ್ಣ ಪೂಜಾರಿ,ಎಲ್.ವಿ.ನಾಯಕ್ ಚಂದ್ರಶೇಖರ ಬೀಜಾಡಿ,ಸಂಸ್ಥೆಯ ಉಪಾಧ್ಯಕ್ಷ ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು. ಹುಬ್ಬಳ್ಳಿಯ ಮೈ ಲೈಫ್ ನ ಪ್ರವೀಣ್ ವಿ.ಗುಡಿ, ಬೀಜಾಡಿ ಸ.ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿನೋದಾ. ಎಂ., ಸಂಸ್ಥೆಯ ಸದಸ್ಯರುಗಳಾದ ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯ, ರಮೇಶ ಭಟ್ ದಂಪತಿ, ಜಯರಾಮ ಪಡಿಯಾರ್, ವಿದ್ಯಾಪ್ರಸಾದ್, ಡಾ.ರಾಜೇಶ ನಾವಡ, ಸಂತೋಷ ಕುಮಾರ್ ಶೆಟ್ಟಿ, ಎಚ್.ಎನ್. ವೆಂಕಟೇಶ್, ಗಣಪತಿ ಭಟ್, ಪ್ರಭಾಕರ ಬಂಡಿ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!