Yakshagana Kalaranga

ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗದ 92ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಯಜ್ಞ (ಶ್ರೀಮತಿ ಕುಸುಮಾ ಮತ್ತು ಶ್ರೀ ಕೃಷ್ಣ ಇವರ ಪುತ್ರಿ) ಇವಳಿಗೆ ಉಡುಪಿಯ ಉದ್ಯಾವರದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷರೂ ಹಾಗು ನಂದಕುಮಾರ್ ಎಸೋಸಿಯೇಟ್ಸ್ ನ ವರಿಷ್ಠರೂ ಆದ ಎಂ. ಗಂಗಾಧರ ರಾವ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಮನೆ ‘ನಂದಾದೀಪ’ವನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ರಂದು 28.03.2026 ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ತಮ್ಮ ಅನುಗ್ರಹ ಸಂದೇಶದಲ್ಲಿ ಎಂ.ಗಂಗಾಧರ ರಾವ್ ಅವರು ಮಾದರಿ ಸಂಸ್ಥೆಯ ಮಾದರಿ ಅಧ್ಯಕ್ಷರಾಗಿದ್ದಾರೆ. ತಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಅರ್ಪಿಸಿ ಸಂತೋಷವನ್ನು ಹೊಂದುವ ವಿರಳರಲ್ಲಿ ಒಬ್ಬರು. ಅವರಲ್ಲಿ ಮುಗ್ಧತೆ ಇದೆ. ತಮ್ಮೊಂದಿಗೆ ಇರುವವರು ಸುಖವಾಗಿರಬೇಕೆಂಬ ಕಾಳಜಿಯಿದೆ. ದಾನಿಗಳಿಂದ ಸ್ವೀಕರಿಸಿದ ಹಣದಿಂದ ಸಮಾಜಮುಖಿ ಕೆಲಸ ಮಾಡುವ ಸಂಘಟನೆಯ ವರಿಷ್ಠರು ಸ್ವತಃ ದಾನಿಗಳಾಗಿದ್ದಾಗ ಜನರಿಂದ ಪಡೆಯುವ ನೈತಿಕ ಶಕ್ತಿ ಹೆಚ್ಚುತ್ತದೆ ಎಂದರು. ಈಗಾಗಲೇ ಸಂಸ್ಥೆಯ ಮೂಲಕ ಆರು ಮನೆಗಳ ಪ್ರಾಯೋಜಕತ್ವ ವಹಿಸಿದ ಅವರಿಗೆ ಇಂತಹ ಕೆಲಸ ಮಾಡುವ ಸಾಮರ್ಥ್ಯವನ್ನು ಭಗವಂತ ಇನ್ನೂ ಅತಿಶಯವಾಗಿ ಕರುಣಿಸಲಿ ಎಂದು ಹರಸಿದರು. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಮಾತನಾಡಿ ಕಲಾರಂಗದ ಕಾರ್ಯಕ್ರಮಕ್ಕೆ ಬಂದಾಗ ಸಜ್ಜನರ ಒಡನಾಟ ಸಿಗುತ್ತದೆ. ಸಮಯ ಪ್ರಜ್ಞೆಯಿಂದ ಶಿಸ್ತುಬದ್ಧವಾಗಿ ನಡೆಸುವ ಅವರ ಸಭಾಕಲಾಪವೇ ಸಮಾಜಕ್ಕೊಂದು ಸಂದೇಶ. ಗಂಗಾಧರ ರಾಯರ ಸರಳತೆ, ಸಜ್ಜನಿಕೆ, ಸಮಾಜಪ್ರೀತಿ ಉಳಿದವರಿಗೆ ಅನುಕರಣೀಯ. ತಮ್ಮ ಕೆಲಸಗಾರರನ್ನು ಸ್ವಂತ ತಮ್ಮಂದಿರಂತೆ ಪ್ರೀತಿಸುವ ನಿಷ್ಕಲ್ಮಶ ಹೃದಯವಂತಿಕೆ ಅವರಲ್ಲಿದೆ ಎಂದು ಹೇಳಿದರು. ಗಂಗಾಧರ್ ರಾವ್ ಸ್ವಾಗತಿಸಿ ಯಕ್ಷಗಾನ ಕಲಾರಂಗದ ಸದಸ್ಯರ ಒಡನಾಟ ನನಗೆ ಸಂತೋಷ ತಂದಿದೆ. ಕಲಾರಂಗದ ಕಾರ್ಯದರ್ಶಿ ಹಾಗೂ ಕಾರ್ಯಕರ್ತರ ಸಮಾಜಮುಖಿ ಚಿಂತನೆಯಿಂದ ತುಂಬಾ ಪ್ರಭಾವಿತನಾಗಿದ್ದೇನೆ. ನನ್ನ ಉದ್ಯಮದ ಯಶಸ್ಸಿನಲ್ಲಿ ಎಲ್ಲಾ ಕೆಲಸಗಾರರ ಶ್ರಮವು ಅಡಕವಾಗಿದೆ. ವಿದ್ಯಾರ್ಥಿನಿಯ ತಂದೆ ಕೃಷ್ಣ ನಿಷ್ಠಾವಂತ ಕೆಲಸಗಾರ. ಅರ್ಧಕ್ಕೆ ನಿಂತಿದ್ದ ಅವರ ಮನೆಯನ್ನು ಪೂರ್ತಿಗೊಳಿಸಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆಂಬ ತೃಪ್ತಿ ನನಗಿದೆ ಎಂದರು. ವಿಜಯ ಇಂಡಸ್ಟ್ರೀಸ್ ನ ಮಾಲಕರಾದ ಕೆ. ಸತ್ಯೇಂದ್ರ ಪೈ, ಇಂಜಿನಿಯರ್ಸ್ ಅಸೋಶಿಯೇಷನ್ ಅಧ್ಯಕ್ಷರಾದ ಯೋಗಿಶ್ಚಂದ್ರಧರ್,ನ್ಯಾಯವಾದಿ ಎಂ. ಗೋಪಿಕೃಷ್ಣ ರಾವ್, ಹಿರಿಯರಾದ ಯು.ವಿಶ್ವನಾಥ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಹಿಂದೆ ಮನೆಯ ಪ್ರಾಯೋಜಕತ್ವ ವಹಿಸಿದ್ದ ಮರ್ಣೆ ಉಮೇಶ್ ಭಟ್, ಡಾ. ಜೆ.ಎನ್.ಭಟ್, ಯು. ಎಸ್. ರಾಜಗೋಪಾಲ್ ಆಚಾರ್ಯ, ಅರವಿಂದ ನಾಯಕ್, ಪಿ. ಕೃಷ್ಣಮೂರ್ತಿ ಭಟ್, ವಿಜಯ್ ಕುಮಾರ್ ಮುದ್ರಾಡಿ ಮತ್ತು ಪ್ರಾಯೋಜಕತ್ವ ವಹಿಸಲಿರುವ ವಿಷ್ಣುಮೂರ್ತಿ ಭಟ್, ಸುದರ್ಶನ ಮೂರ್ತಿ-ಲಕ್ಷ್ಮಿ ದಂಪತಿಗಳು ಭಾಗವಹಿಸಿದ್ದರು. ಉಡುಪಿ ಇಂಜಿನಿಯರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರುಗಳಾದ ಎಂ.ಗೋಪಾಲ ಭಟ್,ಪಾಂಡುರಂಗ ಆಚಾರ್ ಮತ್ತು ಪದಾಧಿಕಾರಿಗಳು, ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ.ಭಟ್, ಪ್ರೊ.ಕೆ.ಸದಾಶಿವ ರಾವ್, ವಿದ್ಯಾ ಪ್ರಸಾದ್ ಮತ್ತು ಸದಸ್ಯರು, ಎಂ. ಗಂಗಾಧರ ರಾವ್ ರ ಮನೆಯವರಾದ ಸರಸ್ವತಿ ಜಿ.ರಾವ್, ಪಾವನಿ, ಸಿಎ.ಹರಿಣಿ ಜಿ.ರಾವ್, ಕಮಲಾಕ್ಷಿ, ಐಶ್ವರ್ಯ ಪಾಲ್ಗೊಂಡಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!