ಯಕ್ಷಶಿಕ್ಷಣ ಟ್ರಸ್ಟ್ ಕಳೆದ 17 ವರ್ಷಗಳಿಂದ ಉಡುಪಿ ವಿಧಾನಸಭಾ ಕ್ಷೇತ್ರದ 48 ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದೆ. ನೂತನವಾಗಿ ಆಯ್ಕೆಯಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಇದರ ಧನಾತ್ಮಕ ಅಂಶವನ್ನು ಮನಗಂಡು ತಮ್ಮ ಕ್ಷೇತ್ರದಲ್ಲಿಯೂ ಇಂತಹ ಒಂದು ಅಭಿಯಾನವನ್ನು ಆರಂಭಿಸಲು ಯಕ್ಷಶಿಕ್ಷಣ ಟ್ರಸ್ಟ್ ಸಹಕಾರ ಕೇಳಿದ ಹಿನ್ನಲೆಯಲ್ಲಿ ಶಾಸಕರು ಮತ್ತು ಟ್ರಸ್ಟ್ ಪದಾಧಿಕಾರಿಗಳ ಸಭೆ ಕಾಪು ಶಾಸಕರ ಕಛೇರಿಯಲ್ಲಿ ಜರಗಿತು. ಇದರಲ್ಲಿ ಸುಮಾರು 15 ಪ್ರೌಢಶಾಲೆಗಳ ಶಿಕ್ಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು. ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ನಮ್ಮ ಸಂಸ್ಕೃತಿಯಲ್ಲಿ ಮೂಡಿ ಬಂದ ಶ್ರೀಮಂತ ಕಲೆ ಯಕ್ಷಗಾನ ಇದನ್ನು ಮಕ್ಕಳಿಗೆ ಕಲಿಸುವುದರ ಮೂಲಕ ಅವರು ಧನಾತ್ಮಕವಾಗಿ ಯೋಚಿಸುವಂತೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕೆ ಶಿಕ್ಷಕರ ಸಹಕಾರ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು. ಟ್ರಸ್ಟಿಗಳಾದ ಎಂ. ಗಂಗಾಧರ ರಾವ್ ಮತ್ತು ವಿ. ಜಿ. ಶೆಟ್ಟಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಂತೆ, ಇಲ್ಲಿಯೂ ಎಲ್ಲರು ಒಟ್ಟಾಗಿ ಇದನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. ಈ ವರ್ಷ ಪ್ರಾಯೋಗಿಕವಾಗಿ 10 ರಿಂದ 15 ಶಾಲೆಗಳಲ್ಲಿ ಆರಂಭಿಸುವ ಕುರಿತು ನಿರ್ಣಯಿಸಲಾಯಿತು. ಭಾಗವಹಿಸಿದ ಶಾಲಾ ಶಿಕ್ಷಕರು ಧನಾತ್ಮಕವಾಗಿ ಸ್ಪಂಧಿಸಿದರು. ಶಾಸಕರು ಟ್ರಸ್ಟ್ ನ ಪದಾಧಿಕಾರಿಗಳನ್ನು ಶಾಲು ಹೊದಿಸಿ ಗೌರವಿಸಿದರು. ಟ್ರಸ್ಟಿ ಎ. ನಟರಾಜ ಉಪಾಧ್ಯಾಯ ಉಪಸ್ಥಿತರಿದ್ದರು. ನಾರಾಯಣ ಎಂ. ಹೆಗಡೆ ವಂದಿಸಿದರು.